ಕಲ್ಲತ್ತಿಗಿರಿ ಜಲಪಾತಕ್ಕೆ ಹೋಗುವ ಮಾರ್ಗದುದ್ದಕ್ಕೂ ಕಾಣುವ ರಮಣೀಯ ನೋಟವು ಕಣ್ಣಿಗೆ ರಸದೌತಣವನ್ನ ನೀಡುತ್ತದೆ. ಹಚ್ಚ ಹಸಿರಿನ ಪ್ರಕೃತಿಯ ಸೊಬಗು ನೋಡುಗರನ್ನು ಮೂಕ ವಿಸ್ಮಿತರನ್ನಾಗಿಸುತ್ತದೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿರುವ ಈ ಜಲಪಾತವು, ಈಗ ಪ್ರಕೃತಿಯ ಮಾನಸ ಪುತ್ರಿಯಂತಾಗಿದೆ.
ಕಲ್ಲತ್ತಿಗಿರಿ ಜಲಪಾತದ ವೈಶಿಷ್ಟ್ಯಗಳು
ಗುಡ್ಡದ ತುದಿಯಿಂದ ಹರಿಯುವ ಹಾಲಿನಂತೆ ಬಿಳಿಯ ಈ ಜಲಪಾತ, ಕಲ್ಲತ್ತಿಗಿರಿ ಜಲಪಾತ ಎಂಬ ಹೆಸರಿನಿಂದ ಪ್ರಸಿದ್ಧಿ ಹೊಂದಿದೆ. ಇತಿಹಾಸದಲ್ಲಿ ಈ ಜಲಪಾತ ಬತ್ತಿದದ್ದಿಲ್ಲ. ಬೆಟ್ಟ-ಗುಡ್ಡಗಳ ಔಷಧಿ ಶಕ್ತಿಯುಳ್ಳ ಮರ-ಗಿಡಗಳ ನಡುವೆ ಹರಿಯುವ ಈ ನೀರಿನಲ್ಲಿ ಸ್ನಾನ ಮಾಡಿದ್ರೆ ಕೆಲ ಕಾಯಿಲೆಗಳು ದೂರವಾಗಿ ಪುಣ್ಯ ಬರುತ್ತದೆ ಎನ್ನುವ ಜನರ ನಂಬಿಕೆ.

ಧಾರ್ಮಿಕ ಇತಿಹಾಸ
ಆನೆ ಆಕಾರದಲ್ಲಿರುವ ಈ ಜಲಪಾತಕ್ಕೆ ಧಾರ್ಮಿಕ ಇತಿಹಾಸವೂ ಇದೆ. ಇಲ್ಲಿಗೆ ಬರುವ ಪ್ರವಾಸಿಗರಲ್ಲಿ ಶಾಲಾ ಮಕ್ಕಳೇ ಹೆಚ್ಚು. ಈ ತಾಣ ಇಡೀ ರಾಜ್ಯಕ್ಕೆ ಗೊತ್ತಿರುವ ಪ್ರಸಿದ್ಧ ಸ್ಥಳ. ಮಕ್ಕಳಷ್ಟೇ ಅಲ್ಲದೇ ಈಗ ಕುಟುಂಬ ಸಮೇತರಾಗಿ ಬಂದು ಎಲ್ಲರೂ ಎಂಜಾಯ್ ಮಾಡುತ್ತಿದ್ದಾರೆ. ಶತಮಾನಗಳಿಂದ ನಿರಂತರವಾಗಿ ಹರಿಯುತ್ತಿರುವ ಈ ಜಲಪಾತದ ಬಳಿ ದತ್ತಾತ್ರೇಯ, ಈಶ್ವರ-ಪಾರ್ವತಿ, ಗಣಪತಿ, ಬೇಲೂರು ಚನ್ನಕೇಶವನ ಜೊತೆ ಶಿಲಾ ಬಾಲಿಕೆಯರ ಉದ್ಭವ ಮೂರ್ತಿಗಳಿವೆ.
Also Read: ಮಧ್ಯರಾತ್ರಿ ವಿಚಿತ್ರ ಕೂಗು – ಬೆಳಗಾದರೆ ಸ್ವರ್ಗ ತೋರುವ ಸುಂದರಿ: ಕೌತುಕಗಳ ನಡುವೆ ಡಾ. ಬ್ರೋ

ಪುರಾಣದ ಕಥೆ
ನರಮನುಷ್ಯರು ಇಲ್ಲಿ ಬಂದು ಈ ಪವಿತ್ರ ಗಂಗೆಯಲ್ಲಿ ಸ್ನಾನ ಮಾಡಿ, ಇಲ್ಲಿನ ವೀರಭದ್ರೇಶ್ವರನಿಗೆ ಪೂಜೆ ಸಲ್ಲಿಸಿದ್ರೆ ಅವರ ಪಾಪ-ಕರ್ಮಗಳೆಲ್ಲಾ ಪರಿಹಾರವಾಗುತ್ತವೆ ಎನ್ನುವುದು ಸ್ಥಳೀಯರ ನಂಬಿಕೆ. ಪವಿತ್ರ ಗಂಗೆಯಾಗಿರುವ ಈ ಕ್ಷೇತ್ರದಲ್ಲಿ ಕಲ್ಲಿನ ಗುಹೆಯೊಳಗೆ ವೀರಭದ್ರಸ್ವಾಮಿ ಮೂರ್ತಿ ಕೂಡ ಉದ್ಭವವಾಗಿದೆ. ಇಲ್ಲಿಗೆ ಬಂದು ಸ್ನಾನ ಮಾಡಿ, ಪೂಜೆ ಸಲ್ಲಿಸಿದರೆ ಜನರ ಮೈಮೇಲೆ ಬರುವ ದುಷ್ಟಶಕ್ತಿಗಳನ್ನು ವೀರಭದ್ರಸ್ವಾಮಿ ನಾಶ ಮಾಡುತ್ತಾನೆ ಎನ್ನುವುದು ಸ್ಥಳೀಯರ ನಂಬಿಕೆ.

ಪ್ರವಾಸ ಮತ್ತು ನಿಸರ್ಗ
ಪ್ರತಿದಿನ ಹತ್ತಾರು ಜನ ಈ ಕ್ಷೇತ್ರಕ್ಕೆ ಬಂದು ದೇವರುಗಳಿಗೆ ಪೂಜೆ-ಕೈಂಕರ್ಯ ಕೈಗೊಳ್ಳುತ್ತಾರೆ. ಪೂಜೆಯ ಬಳಿಕ ಬೆಟ್ಟ-ಗುಡ್ಡಗಳ ಪ್ರಕೃತಿ ಸೌಂದರ್ಯವನ್ನು ಕಂಡು ಪುಳಕಿತರಾಗುತ್ತಾರೆ. ಕಲ್ಲತ್ತಿಗಿರಿ ಜಲಪಾತಕ್ಕೆ ಹೋಗುವ ಮಾರ್ಗದುದ್ದಕ್ಕೂ ಕಾಣುವ ರಮಣೀಯ ನೋಟವು ಕಣ್ಣಿಗೆ ರಸದೌತಣವನ್ನ ನೀಡುತ್ತದೆ. ಹಚ್ಚ ಹಸಿರಿನ ಪ್ರಕೃತಿಯ ಸೊಬಗು ನೋಡುಗರನ್ನು ಮೂಕ ವಿಸ್ಮಿತರನ್ನಾಗಿಸುತ್ತದೆ.
ಒಟ್ಟಾರೆ, ಕಲ್ಲತ್ತಿಗಿರಿಕ್ಷೇತ್ರದ ಜಲಪಾತ ಹತ್ತಾರು ಆಶ್ಚರ್ಯಗಳಿಗೆ ಸಾಕ್ಷಿಯಾಗಿದೆ. ಮೂಲವೇ ಗೊತ್ತಿಲ್ಲದ ಗಂಗೆಯ ಉಗಮಸ್ಥಾನ ಒಂದೆಡೆಯಾದ್ರೆ, ದುಷ್ಟಶಕ್ತಿಗಳನ್ನು ದೂರ ಮಾಡುವ ದೈವಶಕ್ತಿಗೆ ಈ ಕ್ಷೇತ್ರ ಹೆಸರುವಾಸಿ. ಪ್ರವಾಸಕ್ಕೂ ಸೈ, ಧಾರ್ಮಿಕ ನಂಬಿಕೆಗೂ ಸೈ ಎನ್ನುವ ಈ ಕ್ಷೇತ್ರ, ಕಾಫಿನಾಡಿನ ವೈಭವಕ್ಕೆ ಹಿಡಿದ ಕೈಗನ್ನಡಿ ಎಂದರೆ ತಪ್ಪಿಲ್ಲ.