ಉಗ್ರರ ದಾಳಿಗೆ ಬಲಿಯಾದ ಶಿವಮೊಗ್ಗದ ಮಂಜುನಾಥ್ ಪಹಲ್ಗಾಮ್ನಲ್ಲಿ ಕಳೆದ ಕೊನೆಯ ಕ್ಷಣಗಳಿವು
ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ನ ಬೈಸರನ್ ಕಣಿವೆಯಲ್ಲಿ ಏಪ್ರಿಲ್ 22, 2025 ರಂದು ಉಗ್ರರು ನಡೆಸಿದ ಭೀಕರ ದಾಳಿಯಲ್ಲಿ 26 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ದುರಂತದಲ್ಲಿ ಶಿವಮೊಗ್ಗದ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ರಾವ್ ಕೂಡ ಸಾವನ್ನಪ್ಪಿದ್ದಾರೆ. ತಮ್ಮ ಪತ್ನಿ ಪಲ್ಲವಿ ಮತ್ತು ಮಗ ಅಭಿಜಯ್ ಜೊತೆ ಪ್ರವಾಸಕ್ಕೆ ತೆರಳಿದ್ದ ಮಂಜುನಾಥ್, ಪಹಲ್ಗಾಮ್ನ ಸೌಂದರ್ಯವನ್ನು ಆನಂದಿಸುತ್ತಿದ್ದ ವೇಳೆ ರೀಲ್ಸ್ ವಿಡಿಯೋ ಚಿತ್ರೀಕರಿಸಿದ್ದರು. ಆದರೆ, ಆ ಸಂತೋಷದ ಕ್ಷಣಗಳು ಕೆಲವೇ ಗಂಟೆಗಳಲ್ಲಿ ದುರಂತವಾಗಿ ಪರಿವರ್ತನೆಯಾದವು. ಈ ದಾಳಿಯಲ್ಲಿ ಉಗ್ರರ ಗುಂಡಿಗೆ ತುತ್ತಾಗಿ ಮಂಜುನಾಥ್ ಸ್ಥಳದಲ್ಲೇ ಕೊನೆಯುಸಿರೆಳೆದರು. ಅವರು ಕುಟುಂಬದೊಂದಿಗೆ ಕಾಶ್ಮೀರದ ಸೊಗಸನ್ನು ಸವಿಯುತ್ತಿದ್ದ ಕೊನೆಯ ಕ್ಷಣಗಳ ವಿಡಿಯೋ ಈಗ ಎಲ್ಲರ ಮನಕಲಕುವಂತೆ ಮಾಡಿದೆ.